ಶುಭ ನುಡಿ
ಬೂಡಿಯಾರು ರಾಧಾಕೃಷ್ಣ ರೈ
ಪರಶುರಾಮ ಸೃಷ್ಟಿಯ ಈ ಕರಾವಳಿ ಜಿಲ್ಲೆಯ ತುಳುವ ಭಾಷೆಗೆ ಸೀಮಿತವಾದ ಬಂಟ ಸಮುದಾಯದ ಜೀವನಶೈಲಿಯು ಯಾವ ರೀತಿಯಲ್ಲಿ ಇರಬೇಕು ಎಂಬ ಬಗ್ಗೆ ಹಿರಿಯರಾದ ದಂಬೆಕ್ಕಾನ ಸದಾಶಿವ ರೈಯವರು ಬರೆಯುತ್ತಿರುವ “ಬಂಟ ಸಮಾಜದ ಮದುವೆಯ ವೇದಿಕೆ" ಹೇಗಿರಬೇಕು, ಬಡವ ಶ್ರೀಮಂತರೆನ್ನದೆ ಸಮಾಜದಲ್ಲಿ ಸಮಾನವಾಗಿ ಒಂದೇ ರೀತಿಯಲ್ಲಿ ಮದುವೆಯ ಕಾರ್ಯಕ್ರಮ ನಡೆಯಬೇಕು ಎಂಬ ಬಗ್ಗೆ ಪುಸ್ತಕವನ್ನು ಬರೆಯುವ ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಲು ಇಚ್ಛಿಸುತ್ತೇವೆ.
ಬಂಟ ಸಮಾಜ ಒಂದು ವಿಶಿಷ್ಟ ರೀತಿಯ ಸಮಾಜ. ಈ ಸಮಾಜ ಎಂದಿಗೂ ಮತ್ತೊಬ್ಬರಿಗೆ ತಲೆಬಾಗುವ ಸಮಾಜ ಅಲ್ಲ. ಆದರೆ ತಾವು ಸ್ವೀಕರಿಸಿದ ಗೌರವಕ್ಕೆ ಇಮ್ಮಡಿ ಗೌರವವನ್ನು ಕೊಡುವ ಸಮುದಾಯ. ಈ ಸಮಾಜ ಕೇವಲ ಕರಾವಳಿ ಜಿಲ್ಲೆಯಲ್ಲಿ ಮಾತ್ರ ತಮ್ಮ ಮೂಲ ಸ್ಥಾನವನ್ನು ಕಂಡಿದ್ದವು. ಆದರೆ ಇಂದು ಇದು ಪಸರಿಸಿ ಈ ಜಗತ್ತನ್ನೆ ಆವರಿಸಿಕೊಂಡಿದೆ. ಜಗತ್ತಿನ ಯಾವ ಪ್ರದೇಶಕ್ಕೆ ಹೋದರು ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಸಮಾಜದಲ್ಲಿ ಬಡವರನ್ನು ಗುರುತಿಸಿ ಅವರನ್ನು ಸಮಾಜದ ಮುಂಚೂಣಿಗೆ ತರುವಲ್ಲಿ ತಾವೆಲ್ಲರೂ ಒಂದಲ್ಲ ಒಂದು ರೀತಿ ಸಹಕಾರಿಯಾಗಬೇಕೆಂದು ತನ್ನ ಬಯಕೆ.
ಈ ಉದ್ದೇಶವನ್ನು ಇಟ್ಟುಕೊಂಡು ದಂಬೆಕ್ಕಾನ ಶ್ರೀಯುತ ಸದಾಶಿವ ರೈಯವರು ಎಲ್ಲಾ ಬಂಟ ಮದುವೆಯ ವೇದಿಕೆಯು ಸಮಾನ ರೀತಿಯಲ್ಲಿ ನಡೆಯಬೇಕೆಂಬ ಆಶಯದೊಂದಿಗೆ ಈ ಪುಸ್ತಕವನ್ನು ಬರೆಯುವುದು ಬಂಟ ಸಮಾಜಕ್ಕೆ ಪೂರಕ ಎಂದು ಭಾವಿಸುತ್ತೇನೆ.
ಬಂಟ ಸಮಾಜ ಬೇರೆ ಎಲ್ಲಾ ಸಮಾಜದವರ ಜೊತೆ ಬೆರೆಯಲು ಇಚ್ಛೆಪಡುವಂತಹ ಸಮಾಜ. ಬಂಟ ಸಮಾಜದ ಶ್ರೀಮಂತರು, ಬಡ ಬಂಟ ಸಮಾಜ ಉಳಿದ ಎಲ್ಲ ಸಮಾಜಕ್ಕಿಂತ ಭಿನ್ನವಾಗಿ ಕಾಣುವುದರಲ್ಲಿ ಸಂಶಯವಿಲ್ಲ. ಪ್ರತಿ ಗ್ರಾಮ ಮಟ್ಟದಲ್ಲಿ ಬಂಟ ಸಮಾಜದ ಸಮಿತಿಗಳನ್ನು ರಚಿಸಿ ನಾವೆಲ್ಲರೂ ಸಮಾನರು, ನಾವೆಲ್ಲರೂ ಬಂಟರು ಎಂಬ ವೇದವಾಕ್ಯದೊಂದಿಗೆ ಜೀವಿಸಬೇಕು.
ಈ ರೀತಿಯಲ್ಲಿಯೇ ಮೊದಲು ಶ್ರೀಯುತರು ಬರೆದಂತಹಾ "ಬಂಟ ಮದಿಮೆ", "ನಾವು ಬಂಟರು" ಎಂಬ ನಾಮಾಂಕಿತದಲ್ಲಿ ಈಗಾಗಲೇ ಪ್ರಕಟಗೊಂಡಿದೆ. ಮುಂದೆ ಬರುವಂತಹ “ಬಂಟ ಸಮಾಜದ ಮದುವೆಯ ವೇದಿಕೆ ಹೇಗಿರಬೇಕು" ಎಂಬ ಪುಸ್ತಕವು ಸಮಾಜಕ್ಕೆ ಮಾದರಿಯಾಗಲಿ ಎಂಬ ಮಾತನ್ನು ಹೇಳಲು ಇಚ್ಛೆ ಪಡುತ್ತೇನೆ.
ಇತೀ ತಮ್ಮವ-
ಬೂಡಿಯಾರು ರಾಧಾಕೃಷ್ಣ ರೈ
ಮಾಜಿ ಅಧ್ಯಕ್ಷರು, ಬಂಟರ ಸಂಘ, ಪುತ್ತೂರು