ಮದುವೆ ಕಾರ್ಯಕ್ರಮ
ಮನೆಯಿಂದ ವಧು-ವರರು ಹೊರಡುವ ಮುನ್ನ ಮನೆ ದೇವರಿಗೆ, ದೈವಗಳಿಗೆ ಮತ್ತು ನಾಗದೇವರ ಚಾವಡಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಡಬೇಕು. ಎಲ್ಲಾ ಹಿರಿಯರು ಮುಂಡಾಸು ಕಟ್ಟಿಕೊಳ್ಳುವುದು ಸಂಸ್ಕೃತಿ.
ಮದುವೆ ಸಭಾಭವನದ ಮುಖ್ಯದ್ವಾರದಲ್ಲಿ ಸ್ವಾಗತಿಸುವ ಸಂದರ್ಭ ಕಾಲಿಗೆ ನೀರು ಹಾಕುವುದು ಚಿಕ್ಕಮ್ಮ ಅಥವಾ ಸೋದರತ್ತೆ. ಕೈಹಿಡಿಯುವುದು ಗಂಡಿನ ಸಹೋದರಿ ಮತ್ತು ಬಾವ. ಆರತಿ ಬೆಳಗುವುದು ಹೆಣ್ಣಿನ ಕಡೆಯ ಮುತ್ತೈದೆ ಹೆಂಗಸರಿಂದ.
ವೇದಿಕೆಯಲ್ಲಿ ಕಾಲುದೀಪವನ್ನು ವಧು-ವರರ ಮಾತಾ ಪಿತೃಗಳು ಬಂಟ ಗುರಿಕ್ಕಾರನ ನೇತೃತ್ವದಲ್ಲಿ ಎಲ್ಲಾ ದೈವ-ದೇವರುಗಳನ್ನು ಪ್ರಾರ್ಥಿಸಿ ಬೆಳಗಿಸಬೇಕು. ಅಲ್ಲಿಯೇ ಗಣಪತಿಗೆ ಸುತ್ಯೆ ಇಟ್ಟು ಪ್ರಾರ್ಥಿಸುವುದು. ಹಿರಿಯರು ಮುಂಡಾಸು ಧರಿಸಿರಬೇಕು.
ವಧು-ವರರನ್ನು ಒಟ್ಟಾಗಿಯೂ ಅಥವಾ ಬೇರೆ ಬೇರೆಯಾಗಿಯೂ ವೇದಿಕೆಗೆ ಕರೆದುಕೊಂಡು ಹೋಗಬಹುದು. ಮುಖ್ಯ ದ್ವಾರದಲ್ಲಿ ಆರತಿ ಮಾತ್ರ ಪ್ರತ್ಯೇಕ ಪ್ರತ್ಯೇಕ ಆಗತಕ್ಕದ್ದು. ವರನು ವೇದಿಕೆಯ ಬಲಭಾಗದಲ್ಲಿಯೂ, ವಧುವು ಎಡಭಾಗ ದಲ್ಲಿಯೂ ಕುಳಿತುಕೊಳ್ಳತಕ್ಕದ್ದು. ಅಲ್ಲಿ ವಧುವಿಗೆ ವರನ ಕಡೆಯಿಂದ ಉಡುಗೊರೆ ಕೊಟ್ಟು ಸತ್ಕರಿಸಬಹುದು.
ಆಮೇಲೆ ಎರಡೂ ಕಡೆಯ ಹಿರಿಯರು ವೇದಿಕೆಯಲ್ಲಿ ಸಭಾಂಗಣಕ್ಕೆ ಮುಖ ಮಾಡಿ ನಿಂತು ಬಂಟ ಗುರಿಕ್ಕಾರನ ನೇತೃತ್ವದಲ್ಲಿ ಒಂದು ಶ್ರದ್ಧಾ - ಭಕ್ತಿಪೂರ್ವಕ ಪ್ರಾರ್ಥನೆ ನಡೆಯಬೇಕು.
ಮುಂದಿನ ಕಾರ್ಯಕ್ರಮ ಮೂರು ಪ್ರದಕ್ಷಿಣೆ ಬರುವುದು. ಇಲ್ಲಿ ಮೂರು ಹೆಣ್ಣುಮಕ್ಕಳನ್ನು ಕರೆದು ಒಬ್ಬರ ಕೈಯಲ್ಲಿ ಹಚ್ಚಿದ ಕಾಲುದೀಪ, ಎರಡನೆಯವಳ ಕೈಯಲ್ಲಿ ಒಂಬತ್ತು ಕುಡ್ಲೆ ಕುಚ್ಚಲಕ್ಕಿ, ಒಂದು ತೆಂಗಿನಕ್ಕಾ, ಐದು ವೀಳ್ಯದೆಲೆ, ಒಂದು ಅಡಿಕೆಯಿಟ್ಟ ಹರಿವಾಣ ಕೊಡುವುದು. ಮೂರನೆಯವಳ ಕೈಯಲ್ಲಿ ಒಂದು ಹರಿವಾಣದಲ್ಲಿ ನಲುವತ್ತೆಂಟು ವೀಳ್ಯದೆಲೆ ಹಾಗೂ ಐದು ಅಡಿಕೆಯಿಟ್ಟು ಕೊಡುವುದು. ಆ ಮೂರು ಹೆಣ್ಣುಮಕ್ಕಳ ಹಿಂದಿನಿಂದ ಮದುಮಗನ ಬಾವ ಮದುಮಗನನ್ನು, ಅವನ ಪತ್ನಿ (ಮದುಮಗನ ಸಹೋದರಿ ಕೈಹಿಡಿದ ಬಾವನ ಹೆಂಡತಿ) ಮದುಮಗಳನ್ನೂ ಬಲಗೈ ಹಿಡಿದುಕೊಂಡು ಮೂರು ಪ್ರದಕ್ಷಿಣೆ ಬರಬೇಕು.
ವಧೂವರರು- ವಧು ವರನ ಬಲಭಾಗದಲ್ಲಿ ಇರುವಂತೆ ನಿಲ್ಲಬೇಕು. ವರನ ಎಡಭಾಗದಲ್ಲಿ ಕೈಹಿಡಿದ ಬಾವನೂ, ವಧುವಿನ ಬಲಭಾಗದಲ್ಲಿ ಕೈಹಿಡಿದ ವರನ ಸಹೋದರಿಯೂ ನಿಲ್ಲುವುದು.
ಆ ಸಮಯದಲ್ಲಿ ಬಂಟ ಗುರಿಕ್ಕಾರನು ಅವರ ಕೈಯಲ್ಲಿ (ಕೈಹಿಡಿದವರ ಕೈಯಲ್ಲಿ) ಹೂವಿನ ಹಾರ ಕೊಡುವುದು. ವೇದಿಕೆಯಲ್ಲಿ ಬಂಟ ಗುರಿಕ್ಕಾರ ಉತ್ತರಾಭಿಮುಖವಾಗಿ ನಿಂತು ವಧುವನ್ನು ಮೂಡು ಮುಖವಾಗಿಯೂ, ವರನನ್ನು ಪಡುಮುಖವಾಗಿಯೂ ಅವನ ಎದುರು ನಿಲ್ಲಿಸಿಕೊಳ್ಳುವುದು.
ವೇದಿಕೆಯಲ್ಲಿರುವ ಎಲ್ಲಾ ಹಿರಿಯರ ಕೈಗೂ ಅಕ್ಷತೆಕಾಳು ಕೊಡಬೇಕು. ತಕ್ಷಣ ಹೂವಿನ ಹಾರಗಳನ್ನು ವಧು-ವರರ ಕೈಗೆ ಹಸ್ತಾಂತರಿಸಬೇಕು.
ಬಂಟ ಗುರಿಕ್ಕಾರ ವಧುವಿನ ಕೈಗೆ ಅಕ್ಷತೆಕಾಳು ಕೊಟ್ಟು ವರನ ತಲೆಗೆ ಅಕ್ಷತೆ ಹಾಕಿ ಹಾರಾರ್ಪಣೆ ಮಾಡಿಸುವುದು.
ಅದೇ ರೀತಿ ವರನಿಗೆ ಅಕ್ಷತೆ ಕಾಳು ಕೊಟ್ಟು ವಧುವಿನ ತಲೆಗೆ ಅಕ್ಷತೆ ಕಾಳು ಹಾಕಿ ಹಾರಾರ್ಪಣೆ ಮಾಡಿಸುವುದು.
ವಧು-ವರರು ಅಕ್ಷತೆ ಹಾಕುವ ಸಂದರ್ಭದಲ್ಲಿ ಅವರವರ ದೈವದೇವರುಗಳಿಗೆ ಮನಸಾ ವಂದಿಸಿ ಪ್ರಾರ್ಥಿಸುವುದು ಬಹಳ ಮುಖ್ಯ. ಆ ಸಮಯದಲ್ಲಿ ಬಂಟ ಗುರಿಕ್ಕಾರನು ಹಿರಿಯರ ಮತ್ತು ಸೇರಿದಂತಹ ಎಲ್ಲ ಬಂಧು ಮಿತ್ರರ ಪರವಾಗಿ ಪ್ರಾರ್ಥಿಸಬೇಕು.
ಆಗ ವೇದಿಕೆಯಲ್ಲಿರುವ ಎಲ್ಲಾ ಹಿರಿಯರು ಅಕ್ಷತೆಕಾಳನ್ನು ವಧು-ವರರಿಗೆ ಹಾಕಿ ಆಶೀರ್ವದಿಸಬೇಕು.