ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಕಿರಿ ಮಾತು- ಮಲ್ಲಿಕಾ ಜೆ. ರೈ


ಆಚಾರ-ವಿಚಾರಗಳು ನಮ್ಮ ಬದುಕಿಗೆ ಅವಿಭಾಜ್ಯ ಅಂಗ ವಾಗಿದೆ. ಆದರೆ ತಿಳಿದೋ ತಿಳಿಯದೆಯೋ ಕೆಲವೊಂದು ಸಂಸ್ಕೃತಿ ಸಂಸ್ಕಾರಗಳನ್ನು ನಾವು ಮೂಲೆಗುಂಪು ಮಾಡುತ್ತಿದ್ದೇವೆ. ಹಿಂದಿನ ಕಾಲದ ಒಳ್ಳೆಯ ಉದ್ದೇಶಗಳು ಈಗಿನವರಿಗೆ ಮೂಢನಂಬಿಕೆಗಳಂತೆ ತೋರಲಾರಂಭಿಸುತ್ತಿವೆ. ಆಕರ್ಷಣೆಯ ಸುಳಿಯಲ್ಲಿ ಸಿಲುಕಿ ನಮ್ಮ ಪಾರಂಪರಿಕ ಕಟ್ಟುಕಟ್ಟಳೆಗಳನ್ನು ಅಲ್ಲಗಳೆಯುತ್ತಿದ್ದೇವೆ. ಆದರೆ ಮದುವೆಯೆಂಬುದು ಪವಿತ್ರ ಬಂಧನ. ಆ ವಿಷಯದಲ್ಲಿ ಅಂಧಶ್ರದ್ದೆಯಿರಬಾರದು. ಕೂಡಿ ಬಾಳಬೇಕಾದ ಮನಸ್ಸುಗಳು ಸಂಸ್ಕೃತಿಯ ಚೌಕಟ್ಟು ಮೀರಿದ್ದೇ ಆದಲ್ಲಿ, ರಸ ತೆಗೆದ ಕಬ್ಬಿನ ಜಲ್ಲೆಯಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂದಿಗೂ ಹಾಗಾಗದಿರಲಿ!

ಅದಕ್ಕಾಗಿಯೇ ಹಿರಿಯರು ಕಟ್ಟುನಿಟ್ಟಾಗಿ ಪರಿಪಾಲಿಸಿಕೊಂಡು ಬಂದಂತಹ ಕಟ್ಟುಕಟ್ಟಳೆಗಳು ಮರೆತು ಹೋಗಬಾರದೆನ್ನುವ ಅಭಿಲಾಷೆಯಿಂದ ಸದುದ್ದೇಶದ ಹೊತ್ತಗೆಗಳನ್ನಾದರೂ ಓದಿ ಮನನ ಮಾಡಿ ಸಂಸ್ಕಾರಯುತ ಜೀವನವನ್ನು ರೂಪಿಸಿಕೊಂಡು ಒಳಿತಿನ ದಾರಿಯಲ್ಲಿ ಮುನ್ನಡೆಯಲು ತುಂಬಾ ಸಹಾಯಕವಾಗಬಹುದು. ಎಲ್ಲಿ ನಂಬಿಕೆಯಿದೆಯೋ ಅಲ್ಲಿ ದೇವರ ಆಶೀರ್ವಾದ ಸದಾ ಇರುವುದು. ಹಾಗಾಗಿ ನಂಬಿಕೆಯಿಂದ ಜೀವನದ ದಾರಿ ಸುಗಮ ಗೊಳಿಸೋಣ. ಅದರಲ್ಲೂ ಬಂಟ (ನಮ್ಮ) ಸಮಾಜದ ಮದುವೆಯ ಕ್ರಮ ಈಗೀಗ ಬೇರೆ ಬೇರೆ ರೂಪ ತಾಳುತ್ತಿರುವುದು ಹೆಮ್ಮೆಯ ವಿಚಾರ ಅಲ್ಲವೇ ಅಲ್ಲ. ಶೋಕಿಯ ಮದುವೆ ಶೋಕಕ್ಕೆ ತಳ್ಳಬಹು ದೇನೋ ಎಂಬ ಆತಂಕ ಅನೇಕ ಹಿರಿಯರಲ್ಲಿದೆ.

ಹಿರಿಯರು ನಡೆದ ಅನುಭವದ ಹೆಜ್ಜೆಗಳ ಆಧಾರಗ್ರಂಥ ಇದೆಂದರೂ ತಪ್ಪಿಲ್ಲ. ಅರಿತು ಬಾಳಿದರೆ ಜೇನಿನ ಕಡಲು, ಬೆರೆತು ಬಾಳಿದರೆ ಹಾಲುಜೇನು. ಮರೆಯಬಾರದ ವಿಚಾರಗಳನ್ನು ಮತ್ತೆ ನೆನಪಿಸುವ ಈ ಅಮೂಲ್ಯ ರತ್ನವು ಎಲ್ಲರ ಹೃದಯ ದೇಗುಲದಲ್ಲಿ ಸದಾ ಅನುರಣನವಾಗಿರಲಿ. ಹಿರಿಯರಾದ (ಮಾವ) ದಂಬೆಕ್ಕಾನ ಸದಾಶಿವ ರೈಯವರ ಪರಿಶ್ರಮದ ಈ ಕೂಸನ್ನು ಪೋಷಿಸುವ ಹೊಣೆ ಸಕಲರಿಗೂ ಇದೆ. ಆಚಾರಗಳು ಸಂಸ್ಕೃತಿಯನ್ನು ಕಡೆಗಣಿಸದಿರಲಿ.

ಎರಡು ಮಾತು ಬರೆಯಬೇಕೆಂದು ಹೇಳಿದಾಗ ಒಪ್ಪಿಕೊಂಡೆ. ಹೂವಿನೊಂದಿಗೆ ನಾರೂ ಸ್ವರ್ಗಕ್ಕೇರಿದ ಅನುಭವ ನನ್ನದು. ಅದಕ್ಕಾಗಿ ಸದಾ ಕೃತಜ್ಞೆ.

ಮಲ್ಲಿಕಾ ಜೆ. ರೈ, ಗುಂಡ್ಯಡ್ಕ, ಪುತ್ತೂರು