ಶುಭ ಹಾರೈಕೆ
ಶಶಿಕುಮಾರ್ ರೈ ಬಾಲೊಟ್ಟು
ಪರಶುರಾಮ ಸೃಷ್ಟಿಯ ಈ ತುಳುನಾಡಿನಲ್ಲಿ ಹಲವಾರು ಜಾತಿ, ಧರ್ಮದ ಜನಾಂಗಗಳಿವೆ. ಅದರಲ್ಲಿ ನಮ್ಮ ಬಂಟ ಕುಲ ಜನಾಂಗದ ಅಳಿಯಕಟ್ಟು ಸಂಸ್ಕೃತಿಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀಯುತ ದಂಬೆಕ್ಕಾನ ಸದಾಶಿವ ರೈ ಇವರು ಬರೆದ ಈ ಕೈಪಿಡಿಯು ನಮ್ಮ ಯುವ ಜನಾಂಗಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಮದುವೆ ಎಂಬುದು ವಧು-ವರರ, ಎರಡು ಮನೆಗಳ ಸಮ್ಮಿಲನದೊಂದಿಗೆ ಆ ಮನೆಗಳ ಸಂಸ್ಕೃತಿ ಸಂಪ್ರದಾಯಗಳ ಸಮ್ಮಿಲನವೂ ಹೌದು. ಅಂತಹ ಮಹತ್ವಪೂರ್ಣವಾದ ಮದುವೆ ಎಂಬ ಕಾರ್ಯದಲ್ಲಿ ಯಾವ ಲೋಪದೋಷಗಳಾಗದೆ ಎಲ್ಲಾ ಸಂಪ್ರದಾಯಗಳನ್ನು ಪಾಲಿಸುವಂತೆ ತಿಳಿಸುವ ಈ ಕೈಪಿಡಿಯು ಬಹಳ ಸಹಾಯಕಾರಿ. ಬಂಟ ಸಮಾಜದ ಕಾರ್ಯಕ್ರಮಗಳು ರೀತಿ ರಿವಾಜುಗಳ ಬಗ್ಗೆ ಶ್ರೀಯುತ ದಂಬೆಕ್ಕಾನ ಸದಾಶಿವ ರೈರವರಿಗೆ ಇರುವ ಕಾಳಜಿ ಶ್ಲಾಘನೀಯ. ಮದುವೆ ಎಂಬುದು ಒಂದು ಪವಿತ್ರ ಧರ್ಮಕಾರ್ಯ. ಮಾತಾ-ಪಿತೃಗಳು ಲಕ್ಷಾಂತರ ಹಣ ಖರ್ಚು ಮಾಡುವುದು ಮಾತ್ರ ಮುಖ್ಯವಲ್ಲ. ಮಕ್ಕಳಿಗೆ ಮದುವೆಯ ಬಗ್ಗೆ ತಿಳುವಳಿಕೆ ನೀಡುವುದೂ ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ದಂಬೆಕ್ಕಾನ ಸದಾಶಿವ ರೈಯವರು ಈ ಪುಸ್ತಕ ಬರೆಯುವ ಮೂಲಕ ತಮ್ಮ ಕಾಣಿಕೆ ನೀಡಿದ್ದಾರೆ. ಅವರ ಈ ಪ್ರಯತ್ನ ನಮ್ಮ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದೆ. ಅವರ ಈ ಉದ್ದೇಶ ಸಫಲವಾಗಲಿ ಎಂದು ಹಾರೈಸುತ್ತೇನೆ.
ಶಶಿಕುಮಾರ್ ರೈ ಬಾಲ್ಯೊಟ್ಟು
ಅಧ್ಯಕ್ಷರು, ಬಂಟರ ಸಂಘ, ಪುತ್ತೂರು