ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಸಂದೇಶ - ಗೋಪಾಲಕೃಷ್ಣ ಶೆಟ್ಟಿ

 ಸಂದೇಶ

ಗೋಪಾಲಕೃಷ್ಣ ಶೆಟ್ಟಿ

06-11-2021

ಬಂಟ ಸಮುದಾಯದ ಮದುವೆಯ ವಿಧಿವಿಧಾನಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುವ ಬಗ್ಗೆ 'ಬಂಟ ಮದುವೆ ಹಾಗೂ ಬಂಟ ಗುರಿಕ್ಕಾರ' ಎಂಬ ಮಹತ್ತ್ವದ ಮಾರ್ಗದರ್ಶಿ ಕೈಪಿಡಿಯೊಂದನ್ನು ಪ್ರಕಟಿಸುವ ತಮ್ಮ ಚಿಂತನೆ ಅತ್ಯುತ್ತಮ ಹಾಗೂ ಅಭಿನಂದನಾರ್ಹ.

ಬಂಟ ಸಮಾಜದ ಅವೆಷ್ಟೋ ಶುಭ ಕಾರ್ಯಕಲಾಪಗಳು, ಕೌಟುಂಬಿಕ ಕಾರ್ಯಕ್ರಮಗಳು ಅನ್ಯ ಸಮಾಜದ ಪ್ರಭಾವ-ಅನುಕರಣೆಗಳಿಂದ ವಿಭಿನ್ನ ರೀತಿಯಲ್ಲಿ ನಡೆಯುತ್ತಿರುವ ಇಂದಿನ ದಿನಗಳಲ್ಲಿ ತಾವು ಪ್ರಕಟಿಸುತ್ತಿರುವ ಕೈಪಿಡಿಯು ಸಮಾಜಕ್ಕೆ ಒಂದು ದಾರಿದೀಪವಾಗಲೆಂಬುದೇ ನಮ್ಮ ಆಶಯ.

ನಮ್ಮ ಬಂಟ ಸಮಾಜದ ಬಗ್ಗೆ ವಿಶೇಷ ಒಲವು ಹಾಗೂ ಕಾಳಜಿಯನ್ನು ಹೊಂದಿರುವ ತಾವು ಈಗಾಗಲೇ 'ಬಂಟರ ಮದುವೆ' ಮತ್ತು 'ನಾವು ಬಂಟರು' ಎಂಬೆರಡು ಕೃತಿಗಳನ್ನು ಹೊರತಂದಿರುವುದು ಹೆಮ್ಮೆಯ ಸಂಗತಿ.

ಬಂಟರ ಸಾಮಾಜಿಕ, ಕೌಟುಂಬಿಕ ಆಚರಣೆ-ನಡವಳಿಕೆಗಳ ಬಗ್ಗೆ ವಿಶೇಷ ಬೆಳಕು ಚೆಲ್ಲಬಲ್ಲ ತಮ್ಮ ಕೃತಿಗಳು ಬಂಟ ಸಮುದಾಯದ ಅಸ್ಮಿತೆಯನ್ನು ಉಳಿಸುವಲ್ಲಿ ಅತ್ಯಂತ ಪ್ರಮುಖ ವಾದವುಗಳು ಎಂಬ ಪ್ರಾಮಾಣಿಕ ಅನಿಸಿಕೆ ನಮ್ಮೆಲ್ಲರದಾಗಿದೆ. ತಮ್ಮ ಇಂತಹ ಕೃತಿರಚನಾ ಕಾರ್ಯ ಇನ್ನಷ್ಟು ಮುಂದುವರಿಯಲಿ ಮತ್ತು ಸಮಾಜಮುಖಿಯಾದ ತಮ್ಮ ಚಿಂತನೆಗಳು ತಮ್ಮ ಬರವಣಿಗೆಯಲ್ಲಿ ಅನೂಚಾನವಾಗಿ ಹರಿದುಬರಲಿ ಎಂದು ಮನದುಂಬಿ ಹಾರೈಸುತ್ತಿದ್ದೇವೆ.

ಅಧ್ಯಯನಶೀಲವಾಗಿರುವ ತಮ್ಮ ನೂತನ ಕೃತಿಯೂ ಸುಂದರವಾಗಿ ಪ್ರಕಟಗೊಂಡು ಸಮಾಜಬಾಂಧವರೆಲ್ಲರನ್ನು ತಲುಪಲಿ ಹಾಗೂ ಮುಂದೆಯೂ ಸಮಾಜಕ್ಕೆ ಉತ್ತಮ ಕೃತಿಗಳನ್ನು ನೀಡುವಂತೆ ದೇವರು ತಮಗೆ ಆಯುರಾರೋಗ್ಯ ಭಾಗ್ಯವನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ,

ಗೋಪಾಲಕೃಷ್ಣ ಶೆಟ್ಟಿ

ಪ್ರಧಾನ ಕಾರ್ಯದರ್ಶಿ

ಬಂಟರ ಯಾನೆ ನಾಡವರ ಮಾತೃ ಸಂಘ (ರಿ.), ಮಂಗಳೂರು