ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಅಭಿನಂದನಾ ಮಾತು- ನರೇಂದ್ರ ರೈ ದೇರ್ಲ

 ಅಭಿನಂದನಾ ಮಾತು

ನರೇಂದ್ರ ರೈ ದೇರ್ಲ 

ಹಿರಿಯರಾದ ಶ್ರೀ ದಂಬೆಕ್ಕಾನ ಸದಾಶಿವ ರೈಯವರು ಹಿಂದೊಮ್ಮೆ 'ಬಂಟ ಮದಿಮೆ' ಎಂಬ ಕಿರುಹೊತ್ತಗೆಯನ್ನು ಪ್ರಕಟಿಸಿದ್ದರು. ಅದಕ್ಕೆ ನಾನೇ ಬೆನ್ನುಡಿ ಬರೆದ ನೆನಪು. ಒಂದು ಸಮಾಜದ ಕಟ್ಟುಪಾಡುಗಳನ್ನು ಸಾಂಪ್ರದಾಯಿಕ ಆಯಾಮದಲ್ಲಿ ನಿರ್ಬಂಧಿಸಿ, ನಿಯಮಗಳನ್ನು ಮರುಜೋಡಿಸಿ ನಿರ್ವಚಿಸುವ ಕೃತಿಯದು. ಹಾಗಂತ ಬಂಟರೇ ಇರಲಿ ಈ ಲೋಕದ ಯಾವುದೇ ಮತ, ಧರ್ಮ, ಜಾತಿಯವರೇ ಇರಲಿ ಸಂಸ್ಕೃತಿ, ಆಚಾರ-ವಿಚಾರ. ನಿಯಮ, ವಿಧಿಗಳು ಇದಮಿತ್ಥಂ ಆಗಿ ಉಳಿದಿಲ್ಲ. ವಿಕಾಸವಾದ: ನಾಗರಿಕತೆ, ವಲಸೆ, ಶಿಕ್ಷಣ, ನವಮಾಧ್ಯಮ, ಅಂತರ್ ಜಾತೀಯ; ಮತೀಯ-ಧರ್ಮಿಯ ಮದುವೆಗಳು ಇಂಥ ಅಲಿಖಿತ ಶಿಷ್ಟಾಚಾರ ವಿಧಿ-ವಿಧಾನಗಳನ್ನು ಮುರಿದು ಮುಂದೋಡಿದೆ. ಈ ಕುರಿತು ಇತಿಹಾಸ ಮತ್ತು ವರ್ತಮಾನ ಮನುಷ್ಯ ಕೇಂದ್ರಿತ ಕ್ಷೇಮದ ಹಿನ್ನೆಲೆಯಲ್ಲಿ ಎತ್ತುವ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವೇ ಇಲ್ಲ.

ಬಂಟರು ಸುಶಿಕ್ಷಿತರು. ಬಹುಬಗೆಗಳಲ್ಲಿ ದಾರಿ ಕಂಡುಕೊಂಡು ಇಂದು ಜಗತ್ತನ್ನು ಆವರಿಸಿಕೊಂಡಿದ್ದಾರೆ. ರಾಜಕೀಯ, ಉದ್ಯಮ, ಸಿನಿಮಾ, ಕೃಷಿ, ಶಿಕ್ಷಣ, ಬ್ಯಾಂಕಿಂಗ್ ಹೀಗೆ ಬಹುಬಗೆಗಳಲ್ಲಿ ಬೆಳೆದಿದ್ದಾರೆ. ಇಷ್ಟಾದರೂ ಈ ಸಮಾಜದ ಒಂದು ವಿಶಿಷ್ಟತೆಯೆಂದರೆ ಎಷ್ಟೇ ಆಧುನಿಕರಾದರೂ ಅದೇ ಕಾಲಕ್ಕೆ ಪರಂಪರೆಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುವ ಸಂಪ್ರದಾಯಿಕತೆ ಈ ಸಮಾಜದಲ್ಲಿ ಬೇರೆಯವರಿಗಿಂತ ಹೆಚ್ಚು.

ದಂಬೆಕ್ಕಾನ ಸದಾಶಿವ ರೈಯವರು ಬಂಟ ಸಮಾಜದವರ ಬದಲಾವಣೆಯ ವೇಗ, ಬೀಸುಗಾಳಿಗೆ ಒಂದು ಸಾಂಪ್ರದಾಯಿಕ ಕಟ್ಟ ಹಾಕಲು ಈ ಮದುವೆಯ 'ಕೈಪಿಡಿ'ಯನ್ನು ರಚಿಸಿದ್ದಾರೆ. ಗೃಹಸ್ಥ-ಗೃಹಿಣಿಯಾಗುವ 'ಮದುವೆ' ವ್ಯಕ್ತಿ ಬದುಕಿನ ಬಹುಮುಖ್ಯ ಘಟಕ. ಆಧುನಿಕತೆಯ ಸಂದರ್ಭದಲ್ಲಿ, ಎಲ್ಲವೂ ಕಳೆದುಹೋಗುವ ದಿನಮಾನದಲ್ಲಿ ಅನೇಕ ಹಿರಿಯರನ್ನು, ಬಂಟ ಮದುವೆಯ ನಿರ್ವಾಹಕರನ್ನು ಮಾತನಾಡಿಸಿ ರೈಯವರು ಈ ಕಿರುಹೊತ್ತಗೆಯನ್ನು ಸಿದ್ಧಪಡಿಸಿದ್ದಾರೆ.

ಪುಸ್ತಕ ನೋಡಿಕೊಂಡು ಮದುವೆ ಮಾಡಿಸಲು ಅಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮತ್ತು ಅದು ನೂರಕ್ಕೆ ನೂರರಷ್ಟು ಹೀಗೆಯೇ ಆಗಬೇಕೆಂದು ನಿರ್ಬಂಧಿಸುವುದು ಕಷ್ಟವೇ. 

ಜಾತಿ ಒಂದೇ ಆದರೂ ಪ್ರಾದೇಶಿಕವಾದ ಬದಲಾವಣೆಗಳಿರುವುದು ಸಹಜ. ಸ್ಥಳೀಯತೆ-ಸಾಮೀಪ್ಯ ಇಂಥ ಸಂದರ್ಭದಲ್ಲಿ ಪ್ರಭಾವ ಬೀರುತ್ತವೆ. ಹುಡುಗನೋ, ಹುಡುಗಿಯೋ ಬೇರೆ ಜಾತಿ-ಧರ್ಮದವರಾದರೆ ರಾಜಿಯಾಗಲೇ ಬೇಕಾಗುತ್ತದೆ.

ಏನೇ ಇರಲಿ, ಅವ್ಯವಸ್ಥಿತ, ಗೊಂದಲಕಾರಿ ಮದುವೆಯ ವಿಧಿ-ವಿಧಾನಗಳಿಗೆ ಒಂದು ಚೌಕಟ್ಟು ಹಾಕುವುದು ಒಳ್ಳೆಯದೇ ಆಗಿದೆ. ಅಂಥ ಪರಿಪೂರ್ಣ ನೀತಿರೂಪಣೆಯ ಕೈಪಿಡಿ ಇದು. ಎಲ್ಲರ ನೆರವಿಗೆ ಬರಲೆಂದು ಬಯಸಿ ಈ ಕಾರಣಕ್ಕಾಗಿ ದಂಬೆಕ್ಕಾನರನ್ನು ಅಭಿನಂದಿಸುವೆ.

ಪುತ್ತೂರು

18-10-2020

ನರೇಂದ್ರ ರೈ ದೇರ್ಲ

ಹಿರಿಯ ಸಾಹಿತಿ