ಕರಿಮಣಿ
ಬಂಟ ಗುರಿಕ್ಕಾರನು ಎಲ್ಲ ಹಿರಿಯರಿಗೆ ಅಕ್ಷತೆ ಕಾಳು ಕೊಡುವುದು. ವಧುವಿನ ತಾಯಿಯ ಕೈಯಲ್ಲಿ ಕರಿಮಣಿ ಸರವನ್ನು ಕೊಟ್ಟು ಕನಿಷ್ಠ ಒಂಬತ್ತು ಮಂದಿ ಮುತ್ತೈದೆಯರ ಕೈಗೆ ಕೊಟ್ಟು ಪ್ರಾರ್ಥಿಸಿ ತರುವಂತೆ ಹೇಳುವುದು.
ತಂದಂತಹ ಕರಿಮಣಿ ಸರವನ್ನು ವಧುವಿನ ತಾಯಿ ಅವರ ಕುಟುಂಬದ ದೈವ ದೇವರುಗಳನ್ನು ಪ್ರಾರ್ಥಿಸಿ ವರನ ತಾಯಿಯ ಕೈಯಲ್ಲಿ ಕೊಡುವುದು. ವರನ ತಾಯಿ ಅವರ ಕುಟುಂಬದ ದೈವ ದೇವರುಗಳನ್ನು ಪ್ರಾರ್ಥಿಸಿ ವರನ ಕೈಯಲ್ಲಿ ಕೊಡುವುದು. ಆಗ ವರ ಅಕ್ಷತೆಕಾಳುಗಳನ್ನು ವಧುವಿನ ತಲೆಗೆ ಹಾಕಿ ದೈವ ದೇವರುಗಳನ್ನು ಪ್ರಾರ್ಥಿಸಿ ಕರಿಮಣಿ ಕಟ್ಟುವುದು. ಆ ಸಂದರ್ಭದಲ್ಲಿ “ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ, ನಾತಿಚರಾಮಿ" ಎಂದು ಹೇಳಿ ತಾಳಿ ಕಟ್ಟಬೇಕು- ಓ ಧರ್ಮಪತ್ನಿ, ಧರ್ಮ ದಾನಾದಿ ವಿಷಯಗಳಲ್ಲಿ, ಧನ ಧಾನ್ಯಾದಿ ಸಂಪತ್ತುಗಳ ವಿಷಯದಲ್ಲಿ, ಶಾರೀರಿಕ ಸುಖ ಸಂತೋಷಗಳಲ್ಲಿ, ದಾನಧರ್ಮದ ಪುಣ್ಯಫಲಗಳ ವಿಷಯಗಳಲ್ಲಿ ಇಂದಿನಿಂದ ನೀನು ನನ್ನ ಸಮಭಾಜನಳು ಆಗಿರುವೆ. ನಿನ್ನನ್ನು ಅತಿಕ್ರಮಿಸಿ ನಾನು ನಡೆಯಲಾರೆ. ನೀನೂ ಸಹ ನನ್ನಂತೆಯೇ ಇರಬೇಕು ಎಂದು ದೈವಸಾಕ್ಷಿಯಾಗಿ ಪ್ರಮಾಣ ಮಾಡಿ ಮಾಂಗಲ್ಯಧಾರಣೆ ಮಾಡುತ್ತಾನೆ.
"ಮಾಂಗಲ್ಯಂ ತಂತು ನಾನೇನ ಮಮ ಜೀವನ ಹೇತು ನಾ, ಕಂಠೇ ಭಾಮಿ ಶುಭಗೇ ತ್ವಂ ಜೀವ ಶರದಶ್ಚತಂ.'
ಓ ಮಾಂಗಲ್ಯವೇ, ನನ್ನ ಜೀವನ ಸೌಭಾಗ್ಯಕ್ಕೆ ಕಾರಣಳಾಗಿರುವ ಈ ನನ್ನ ಧರ್ಮಪತ್ನಿಯ ಕೊರಳಲ್ಲಿ ಅಲಂಕರಿಸುತ್ತಿದ್ದೇನೆ. ನೀನು ಈ ಸೌಭಾಗ್ಯವತಿಗೆ ರಕ್ಷೆಯಾಗಿ ನೂರು ವರ್ಷಗಳ ಕಾಲ ಇರುವಂತಾಗಲಿ. ಸಮಸ್ತ ದೇವತೆಗಳೂ ನಿನ್ನನ್ನು ಆಶೀರ್ವದಿಸಲಿ ಎಂದು ಹೇಳಿ ತಾಳಿ ಕಟ್ಟುತ್ತಾನೆ.
ತಕ್ಷಣ ವಧುವಿನ ಹಣೆಗೆ ತಿಲಕವಿಡುವುದು. ಆಗ ಎಲ್ಲಾ ಹಿರಿಯರು ಅಕ್ಷತೆಕಾಳು ಹಾಕಿ ಹರಸಬೇಕು.
ಮುಂದೆ ಅವರವರ ಕೈಯಲ್ಲಿ ತಂದ ತಾಂಬೂಲವನ್ನು ಅವರವರ ಬಲಕೈಗೆ ಕೊಟ್ಟು ವಧು-ವರರ ಬಲಕೈಗಳನ್ನು ಒಟ್ಟುಗೂಡಿಸಿ, ಬಂಟ ಗುರಿಕ್ಕಾರನು ನವದಂಪತಿಗಳಿಗೆ ಮುಂದಿನ ಜೀವನದ ಬಗ್ಗೆ ಒಂದೆರಡು ಹಿತವಚನಗಳನ್ನು ನೀಡಿ ಹರಸುವುದು. ಆಮೇಲೆ ಅವರೇ ಕೈ ಕೈ ಹಿಡಿದುಕೊಂಡು ಪೀಠಕ್ಕೆ ಮೂರು ಪ್ರದಕ್ಷಿಣೆ ಬರುವುದು. ಆಮೇಲೆ ಸಭಾಸದರಿಗೆ ನಮಸ್ಕರಿಸಿ, ವೇದಿಕೆಯ ಪೀಠದಲ್ಲಿ ಕುಳಿತುಕೊಳ್ಳುವುದು.
ವಧುವಿನ ಬಲಭಾಗದಲ್ಲಿ ವರನು ಕುಳಿತುಕೊಳ್ಳತಕ್ಕದ್ದು.
ಮುಂದೆ ಐದು ಜನ ಮುತ್ತೈದೆಯರಿಂದ ಆರತಿ ಬೆಳಗಿಸಬೇಕು. ಆ ಸಂದರ್ಭದಲ್ಲಿ ನವದಂಪತಿಗಳು ಲಕ್ಷ್ಮೀನಾರಾಯಣ, ಈಶ್ವರ ಪಾರ್ವತಿ, ದೇವಸ್ವರೂಪಿಗಳು ಎಂಬ ಭಾವನೆಯಿಂದ ಅವರಿಗೆ ಆರತಿಯೆತ್ತಬೇಕು.
ಶುಭಮುಹೂರ್ತದ ಶುಭಕಾರ್ಯಗಳು ಮುಗಿದು ನವದಂಪತಿಗಳು ಹೊಸ ಪೀಠದಲ್ಲಿ ಆಸೀನರಾದಾಗ ಅವರನ್ನು ಹೊಸ ಬಾಳಿನ – ಹೊಸ ಬದುಕಿನ ಆಶಾಗೋಪುರದ ಮಜಲಿಗೆ ಕಾಲಿಡಲು ಸನ್ನದ್ಧರಾಗಿರುವ ಇವರ ಪಯಣದ ಹಾದಿಗೆ ಈ 'ಆರತಿ' ದಾರಿದೀಪ ಮತ್ತು ಶ್ರೀರಕ್ಷೆ. ಹಾಗೂ ದೈವದೇವರು ಗಳನ್ನು ಪ್ರಾರ್ಥಿಸಿ ಸಂಕಲ್ಪಿಸಿದ ದಿವ್ಯಜ್ಯೋತಿಯೇ ಆಗಿದೆ.
ಆ ಕ್ಷಣಗಳಲ್ಲಿ ನವದಂಪತಿಗಳು ಪವಿತ್ರರು, ಪಾವನರು, ದೇವಸಮಾನರು ಎಂದು ಭಾವಿಸಿ ಆರತಿ ಮಾಡುವುದು. ಆ ಆರತಿ ಮಾಡುವಾಗ ದೈವ ದೇವರುಗಳ ಸಂಕಲ್ಪಿತ ಶುಭದಾಯಕ ಆರತಿ ಅದಾಗಲೆಂದೇ ಆರತಿ ಮಾಡುವವರ ಪ್ರಾರ್ಥನೆಯಾಗಬೇಕು.
ದೇಸೆ
ಒಂದು ಹರಿವಾಣದಲ್ಲಿ ಒಂಬತ್ತು ಕುಡ್ಡೆ ಕುಚ್ಚಲಕ್ಕಿ, ಐದು ವೀಳ್ಯದೆಲೆ, ಒಂದು ಅಡಿಕೆಯಿಟ್ಟು ವಧು-ವರರ ತಂದೆ ತಾಯಿ ಒಟ್ಟಾಗಿ ಸಭೆಯ ಅಪ್ಪಣೆ ಪಡೆದು ಎದುರು ಭಾಗದ ಟೀಪಾಯಿ ಯಲ್ಲಿಟ್ಟು ನಾಲ್ಕು ಜನರೂ ಒಟ್ಟಿಗೆ ಸೇಸೆ-ದೇಸೆ ಹಾಕಬೇಕು. ಆಗ ವಧು-ವರರು ತಂದೆ-ತಾಯಿ, ಅತ್ತೆ-ಮಾವನ ಕಾಲು ಮುಟ್ಟಿ ನಮಸ್ಕರಿಸುವುದು. ಮತ್ತೆ ಸಭಾಸದರಿಂದ ದೇಸೆ.