ಪುಸ್ತಕದ ಮುಖಪುಟ

ಪುಸ್ತಕದ ಮುಖಪುಟ

ಬೆನ್ನುಡಿ- ಎ. ಹೇಮನಾಥ ಶೆಟ್ಟಿ, ಕಾವು

 ಬೆನ್ನುಡಿ

ಎ. ಹೇಮನಾಥ ಶೆಟ್ಟಿ, ಕಾವು

ಸರಸ-ವಿರಸ ಸಾಮರಸ್ಯದ ಮಧುರ ಬಾಂಧವ್ಯ 'ಮದುವೆ'. ಪ್ರಾಚೀನ ಯುಗದಲ್ಲಿ ಮದುವೆ ಎನ್ನುವುದು ಮರೀಚಿಕೆಯಾಗಿತ್ತು. ಋಷಿ-ಮುನಿಗಳ ಸುಜ್ಞಾನದ ಪ್ರತೀಕವಾಗಿ ಹೆಣ್ಣು-ಗಂಡಿನ ಮದುವೆ ಎನ್ನುವ ಪರಸ್ಪರ ಸ್ಪಂದನದ ಅನುಬಂಧ ಹುಟ್ಟಿಕೊಂಡಿತು. ಹೆಣ್ಣನ್ನು ಪಶುಸಮಾನವಾಗಿ ಅನುಭವಿಸುತ್ತಿದ್ದ ಪುರುಷ ಪ್ರಪಂಚದ ಅಂಧಕಾರದಿಂದ 'ಮದುವೆ' ಎನ್ನುವ ದೀವಟಿಗೆ ಪ್ರಜ್ವಲಿಸ ಲಾರಂಭಿಸಿತು ಎಂದು ಪ್ರಸ್ತಾವನೆಯಲ್ಲಿ ಬಿಂಬಿಸಿದ ದಂಬೆಕ್ಕಾನ ಸದಾಶಿವ ರೈಯವರು ಆಧುನಿಕ ಯುವ ಪೀಳಿಗೆ ಪಾತಿವ್ರತ್ಯದ ಮಹತ್ವವನ್ನು ಧಿಕ್ಕರಿಸಿ ಸ್ವಚ್ಛಂದ ಬದುಕಿನತ್ತ, ಸ್ಟೇಚ್ಛೆಯತ್ತ ವಾಲುತ್ತಿರುವುದಕ್ಕೆ ವಿಷಾದಿಸುತ್ತಾ ವಿವಾಹದ ಮಹತ್ವವನ್ನು ಮನೋಜ್ಞವಾಗಿ ವರ್ಣಿಸಿದ್ದಾರೆ.

ನಾಗರಿಕ ಬಂಟ ಸಮಾಜದ ವಿವಾಹ ವ್ಯವಸ್ಥೆಯನ್ನು ಕೂಲಂಕುಷವಾಗಿ ವಿಶ್ಲೇಷಿಸುತ್ತಾ ವಿವಾಹದಲ್ಲಿ ಶ್ರೀ ದೇವರ, ಗುರು-ಹಿರಿಯರ ಕೃಪಾಕಟಾಕ್ಷ ಮತ್ತು ಮಹತ್ವವನ್ನು ಮನದಟ್ಟು ಮಾಡಿರುತ್ತಾರೆ. ಹಿಂದೆ ಹೆಣ್ಣು-ಗಂಡಿನ ಮುಖಾಮುಖಿ ಮದುವೆ ಮಂಟಪದಲ್ಲಿ ಅಥವಾ ಮೊದಲ ರಾತ್ರಿಯಾಗಿದ್ದರೆ ಇಂದು ಪರಸ್ಪರ ಆಯ್ಕೆ ಅವರವರೇ ತೀರ್ಮಾನಿಸಿ ಹಿರಿಯರನ್ನು ಅಸಡ್ಡೆ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.

ವಿವಾಹ ಬಂಧನಕ್ಕೊಳಗಾದ ಹೆಣ್ಣು, ಸರ್ವರಿಗೂ ಮಾತೃ ಸದೃಶಳಾಗಿ ಬದುಕಿ ಮುತ್ತೈದೆ ಭಾಗ್ಯವನ್ನು ಅನುಭವಿಸಿ ಎಲ್ಲರ ಆರಾಧ್ಯ ದೇವತೆಯಂತೆ ಬದುಕಿ ಗಂಡನ ಪ್ರೀತ್ಯಾದರಗಳಿಗೆ ಪಾತ್ರಳಾಗಿ ಅನ್ನೋನ್ಯ ದಾಂಪತ್ಯ ಜೀವನದ ರಸದೌತಣವನ್ನು ಅನುಭವಿಸಿ ಪರಸ್ಪರ ಹೊಂದಿಕೊಂಡು ಬಾಳುವ ಮನೋಭಾವ ವನ್ನು ತೋರಬೇಕು ಎನ್ನುತ್ತಾರೆ.

ಸಾಮರಸ್ಯವೇ ಸಂಸಾರವೆಂದು ಹೊಂದಾಣಿಕೆಯೇ ದಾಂಪತ್ಯ ವೆಂದು ವಿವಾಹದ ವಿಭಿನ್ನ ಅರ್ಥಗಳನ್ನು ಬಹಳ ಮಾರ್ಮಿಕವಾಗಿ ಬರೆದ ಸಾಹಿತಿ ದಂಬೆಕ್ಕಾನ ಸದಾಶಿವ ರೈಯವರು ದಾಂಪತ್ಯದ ಒಳಗುಟ್ಟನ್ನು ಅರಿತು ಪರಸ್ಪರ ಆಧಾರ-ವಿಶ್ವಾಸದಿಂದ ದಂಪತಿ ಬದುಕಿ ಬಾಳಬೇಕು ಎನ್ನುತ್ತಾರೆ. ಸಾಮಾಜಿಕ ಸದಾಚಾರದಿಂದ ಗಂಡ-ಹೆಂಡತಿಯನ್ನು ಬೆಸೆದ ಬಾಂಧವ್ಯ ಬೆಸುಗೆಯೇ ವಿವಾಹ ಎನ್ನುವ ಲೇಖಕರು 'ಮದುವೆ'ಯ ಹರಿಕಾರನಾದ ಬಂಟ ಗುರಿಕ್ಕಾರನ ಮಾರ್ಗಸೂಚಿಯಲ್ಲಿ ಮೂವತ್ತೆರಡು ಹಂತಗಳನ್ನು ವರ್ಣಿಸುತ್ತಾ ಪ್ರಾರಂಭದಲ್ಲಿ ವೇದಿಕೆಯ ದಿಕ್ಕಿನಿಂದ ಹಿಡಿದು ಮದುಮಗ-ಮದುಮಗಳು ಎಲ್ಲ ಹಿರಿಯರ ಕಾಲಿಗೆ ನಮಸ್ಕರಿಸಿ ಶುಭಾಶೀರ್ವಾದವನ್ನು ಪಡೆಯುವವರೆಗೆ ತಿಳಿಸಿರುತ್ತಾರೆ.

ಗಂಡು-ಹೆಣ್ಣಿನ ನಿಶ್ಚಿತಾರ್ಥದ ರೂಪುರೇಷೆಗಳ ಬಗ್ಗೆ ಬರೆಯುತ್ತಾ ನಿಶ್ಚಯದ ಸಾಹಿತ್ಯಗಳ ಪಟ್ಟಿಯನ್ನು ನೀಡಿ ಕಾರ್ಯಕ್ರಮದ ವೈಖರಿಯ ಬಗ್ಗೆ ಬರೆಯುತ್ತಾ ವಿವಿಧ ಹಂತಗಳ ಮಾಹಿತಿ ನೀಡುತ್ತಾ ದೇವತಾರಾಧನೆಯನ್ನು ವಿಸ್ತರಿಸುತ್ತಾ ಹೆಣ್ಣನ್ನು ಕೂರಿಸುವ ರೀತಿ, ಎಲ್ಲರೂ ನಿಲ್ಲುವ ವಿವಿಧ ದಿಕ್ಕುಗಳು, ದೀಪ ಪ್ರಜ್ವಲನ ಇತ್ಯಾದಿಗಳನ್ನು ಸವಿಸ್ತಾರವಾಗಿ ವರ್ಣಿಸಿರುತ್ತಾರೆ. ಪಂಚಭೂತಗಳ ಸಾಕ್ಷಿಯಾಗಿ ದೈವ ದೇವರುಗಳ ಸಾಕ್ಷಿಯಾಗಿ ಜವಾಬ್ದಾರಿಯುತ ಹಿರಿಯರಾಗಿ ಗಂಡು-ಹೆಣ್ಣಿಗೆ ಮದುವೆ ಮಾಡಿಕೊಡುವ ಸಂಕಲ್ಪವನ್ನು ಬದ್ಧತೆಯಿಂದ ಮಾಡುವುದನ್ನು ವರ್ಣಿಸಿರುತ್ತಾರೆ.

ಮದುವೆ ಮಂಟಪಕ್ಕೆ ಬೇಕಾದ ಪರಿಕರಗಳ ಪಟ್ಟಿಯನ್ನು ನೀಡಿ ಮದುವೆ ಕಾರ್ಯಕ್ರಮವನ್ನು ಹೃದಯಂಗಮವಾಗಿ ವಿಸ್ತರಿಸುತ್ತಾ ವೇದಿಕೆಯಲ್ಲಿರುವ ಎಲ್ಲಾ ಹಿರಿಯರೂ ಅಕ್ಷತೆ ಕಾಳನ್ನು ವಧು-ವರರಿಗೆ ಹಾಕುವ ಮೂಲಕ ಕಾರ್ಯೋನ್ಮುಖರಾಗಿ ಮುಂದೆ ಧಾರಾಕಲಶದ ಬಗ್ಗೆ ಸವಿಸ್ತಾರವಾಗಿ ಬರೆದು ಒಡ್ಡಿ ಉಂಗುರವನ್ನು ವರನು ವಧುವಿಗೆ ತೊಡಿಸುವ ಹಂತವನ್ನು ಬರೆದಿರುತ್ತಾರೆ.

ಮದುವೆ ಎಂದರೆ ಮಾಂಗಲ್ಯ ಬಂಧನವೆನ್ನುತ್ತಾ ವರನು ವಧುವಿನ ಕೊರಳಿಗೆ ಕರಿಮಣಿ ಸರವನ್ನು ಅಂದರೆ ತಾಳಿಯನ್ನು "ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ ನಾತಿಚರಾಮಿ” ಎಂದು ಹೇಳಿ ಕಟ್ಟುವುದನ್ನು ಹಾಗೂ ಈ ಶ್ಲೋಕದ ತಾತ್ಪರ್ಯವನ್ನು ಬರೆಯುತ್ತಾ ಬಂಟ ವಧು ಮಾಂಗಲ್ಯ ಬಂಧನದಿಂದ ಗೃಹಿಣಿ ಪಟ್ಟವನ್ನು ಅಲಂಕರಿಸುವುದನ್ನು ಶತವರ್ಷ ಸೌಭಾಗ್ಯವತಿಯಾಗಿ ಇರುವಂತೆ ಸಮಸ್ತ ದೇವತೆಗಳು ಆಶೀರ್ವದಿಸಲಿ ಎಂದು ವರನು ಶ್ಲೋಕದ ರೂಪದಲ್ಲಿ ಹೇಳುತ್ತಾ ವಧುವಿಗೆ ತಾಳಿಯನ್ನು ಕಟ್ಟುವುದನ್ನು ಅರ್ಥಪೂರ್ಣವಾಗಿ ಬರೆದಿರುತ್ತಾರೆ.

ಪಂಚ ಮುತ್ತೈದೆಯರು ಲಕ್ಷ್ಮೀನಾರಾಯಣ, ಈಶ್ವರ-ಪಾರ್ವತಿ ದೇವಸ್ವರೂಪರಾದ ನವದಂಪತಿಗಳಿಗೆ ಆರತಿಯನ್ನು ಎತ್ತಿ ಹೊಸ ಬಾಳಿನ ಹೊಸ ಬದುಕಿನ ಹೊಸ್ತಿಲಲಿ ನಿಂತಿರುವ ಇವರ ಬಾಳ ಪಯಣಕ್ಕೆ 'ಆರತಿ'ಯೇ ದಾರಿದೀಪ ಮತ್ತು ಶ್ರೀರಕ್ಷೆ ಎಂದು ಪ್ರಾರ್ಥಿಸಿ ದೇಸೆಯ ಪರಿಕರಗಳ ಬಗ್ಗೆ ಬರೆದು, ಸಭಾಸದರಿಂದ ದೇಸೆಯ ಮೂಲಕ ಶುಭಾಶೀರ್ವಾದವನ್ನು ಪಡೆದು ಮಂಟಪ ಇಳಿಸುವಿಕೆ ಬಗ್ಗೆ ವಿವರಿಸುತ್ತಾರೆ.

ವಧು ಬಿಟ್ಟು ಕೊಡುವುದು ಮುಂದಿನ ಮನೋಜ್ಞ ಹಂತ. ಬಾಲ್ಯವನ್ನು ದಾಟಿ ಹದಿಹರೆಯವನ್ನು ದಾಟಿ ಯೌವನಕ್ಕೆ ಕಾಲಿಟ್ಟ ಮನೆ ಮಗಳನ್ನು ಗಂಡನ ಮನೆಗೆ ಮುಂದಿನ ದಾಂಪತ್ಯ ಬದುಕನ್ನು ಬಾಳಲು ಕಳುಹಿಸಿ ಕೊಡುವ ಹೃದಯಂಗಮ ದೃಶ್ಯ ಸೇರಿದ ಎಲ್ಲರ ಕಣ್ಣಲ್ಲೂ ಭಾಷ್ಪಾಂಜಲಿಯನ್ನು ಬರಿಸುತ್ತದೆ. ಕೈಹಿಡಿದು, ತಾಳಿಕಟ್ಟಿ, ಸಪ್ತಪದಿಯನ್ನು ತುಳಿದು ಬಾಳ ಪಯಣದಲ್ಲಿ ಜೊತೆಗಾರನಾಗಿರುವ ಗಂಡನಿಗೆ ತಕ್ಕ ಹೆಂಡತಿಯಾಗಿ, ಅತ್ತೆ-ಮಾವಂದಿರ ಒಲುಮೆಯ ಸೊಸೆಯಾಗಿ ವಿಧೇಯತೆ-ವಿನಯ ಗಳನ್ನು ಮೈಗೂಡಿಸಿ ಬಾಳಬೇಕು ಎನ್ನುವ ಮಾರ್ಗದರ್ಶನವನ್ನು ನೀಡಿ ವಧುವನ್ನು ಮಗಳಂತೆ ಕಾಣಿ ಎನ್ನುತ್ತಾ ವಧುವನ್ನು ಗಂಡಿನ ಮನೆಯವರ ಸುಪರ್ದಿಗೆ ಒಪ್ಪಿಸುವ ಹಂತ ಬಹಳ ಮಹತ್ವ ಪೂರ್ಣವಾಗಿದೆ.

ಬಾಳು ತಿಳಿನೀರಿನಂತೆ ಶಾಂತವಾಗಿರಬೇಕು. ಹಿಂದೆ ನವ ವಧೂವರರಿಗೆ ಹಾಲನ್ನು ಕುಡಿಯಲು ಕೊಡುತ್ತಿದ್ದರೆ ಈಗ ಕಲ್ಪವೃಕ್ಷದಿಂದ ಇಳಿಸಿದ ಸೀಯಾಳದ ಮೂಲಕ ಪರಸ್ಪರ ಬದುಕು ಪ್ರಾರಂಭಗೊಳ್ಳುತ್ತದೆ.

ಒಟ್ಟಿನಲ್ಲಿ ದಂಬೆಕ್ಕಾನ ಸದಾಶಿವ ರೈಯವರು 'ಬಂಟ ಮದುವೆ' ಎನ್ನುವ ಕೃತಿಯನ್ನು ಕೇವಲ ಹವ್ಯಾಸಿ ಸಾಹಿತ್ಯವಾಗಿ ಬರೆಯದೆ ಮದುವೆ ಎನ್ನುವ ಧಾರ್ಮಿಕ ಕಾರ್ಯದ ಪವಿತ್ರತೆಯನ್ನು ಎತ್ತಿ ಹಿಡಿದಿದ್ದಾರೆ. ಬಾಳೊಂದು ನಂದನ, ಅನುರಾಗ ಬಂಧನ, ಜೇನುಗೂಡಿನ ಸದನ ಎನ್ನುವಂತೆ ಸಪ್ತಪದಿಯನ್ನು ತುಳಿದು ವಿವಾಹ ಬಂಧನಕ್ಕೊಳಗಾಗುವ ಜೋಡಿಗಳ ಬದುಕು ಹೂವಿನ ಹಾಸಿಗೆಯಾಗಬೇಕಾದರೆ ಪರಸ್ಪರ ಹೊಂದಾಣಿಕೆ, ಗುರು-ಹಿರಿಯರ, ಸಮಸ್ತ ದೇವತೆಗಳ ಶುಭಾಶೀರ್ವಾದ ಇರಬೇಕು ಎಂದು ಬರೆಯುತ್ತಾ 'ಮದುವೆ' ಎನ್ನುವ ಕಲ್ಪನೆಗೆ ಮೂರ್ತ ಸ್ವರೂಪವನ್ನು ನೀಡಿ ಏಕಪತ್ನಿವ್ರತಸ್ಥನಾಗಿ ಪುರುಷನನ್ನು ಪ್ರಭಾವಿತರನ್ನಾಗಿಸುವುದರಲ್ಲಿ ಎರಡು ಮಾತಿಲ್ಲ.

- ಎ. ಹೇಮನಾಥ ಶೆಟ್ಟಿ ಕಾವು

ಉಪಾಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ (ರಿ.)

ಬಂಟ್ಸ್ ಹಾಸ್ಟೆಲ್, ಮಂಗಳೂರು 575 003